ಜಾನಪದ ಕ್ಷೇತ್ರದಲ್ಲಿ ಅಪಾರವಾಗಿ ಕೆಲಸ ಮಾಡಿರುವ ಡಾ ಕೆ ಆರ್ ಸಂಧ್ಯಾರೆಡ್ಡಿಯವರು ಕನ್ನಡದ ಕವಯತ್ರಿ, ಕಥೆಗಾರ್ತಿ, ವೈಚಾರಿಕ ಲೇಖನಗಳ ಕರ್ತೃ ಹಾಗೂ ಜಾನಪದ ವಿದ್ವಾಂಸೆ. ಕನ್ನಡದ ಜಾನಪದ ಲೋಕದಲ್ಲಿ ಖ್ಯಾತಿವೆತ್ತ ಸಾಹಿತಿ. ಆಧುನಿಕ ಜಾನಪದ ಪ್ರಕಾರಗಳ, ಸಂಶೋಧನೆಗಳ ಬಗ್ಗೆ ವಿಶೇಷ ಪರಿಶ್ರಮ ಹೊಂದಿದ್ದಾರೆ. ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. == ಜನನ ಮತ್ತು ವಿದ್ಯಾಭ್ಯಾಸ == ಸಂಧ್ಯಾರೆಡ್ಡಿಯವರು ೧೯೫೩ರ ಜೂನ್ ೨೨ರಂದು ಚಿತ್ರದುರ್ಗದ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬವೊಂದರಲ್ಲಿ ಜನಿಸಿದರು. ತಂದೆ ಶ್ರೀ ಕೆ. ರಾಮರೆಡ್ಡಿಯವರು ಪ್ರೌಢಶಾಲಾ ಅಧ್ಯಾಪಕರೂ, ಮುಖ್ಯೋಪಾಧ್ಯಾಯರೂ ಆಗಿದ್ದು, ಶಾಲಾ ಇನ್‌ಸ್ಪೆಕ್ಟರಾಗಿ ನಿವೃತ್ತರಾದವರು. ಆದರ್ಶ ಶಿಕ್ಷಕರೆಂದು ಹೆಸರು ಗಳಿಸಿದ್ದರು. ತಾಯಿ ಶ್ರೀಮತಿ ಅನಸೂಯಾ ರಾಮರೆಡ್ಡಿಯವರು ಹಿಂದಿ ಶಿಕ್ಷಕಿಯಾಗಿದ್ದು, ಕತೆ-ಕಾದಂಬರಿಗಾರ್ತಿಯಾಗಿ ಹೆಸರುವಾಸಿಯಾದವರು. ಸಂಧ್ಯಾರೆಡ್ಡಿಯವರು ಚಿತ್ರದುರ್ಗದಲ್ಲಿ ವಿದ್ಯಾಭ್ಯಾಸವನ್ನಾರಂಭಿಸಿ, ಬಿ.ಎಸ್ಸಿ ಪದವಿಯನ್ನು ಪಡೆದ ಬಳಿಕ ಮಂಗಳೂರಿನಲ್ಲಿ, ಮೈಸೂರು ವಿಶ್ವವಿದ್ಯಾನಿಲಯದ ಎಂ.ಎ ಪದವಿಯನ್ನು ೧೯೭೩ರಲ್ಲಿ ಪಡೆದರು. ‘ಕನ್ನಡ ಜನಪದ ಕಥೆಗಳು’ ಎಂಬ ಪ್ರೌಢಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್‌ ಪದವಿಯನ್ನು ೧೯೮೦ರಲ್ಲಿ ಪಡೆದರು. == ಉದ್ಯೋಗ == ಬೆಂಗಳೂರಿನಲ್ಲಿರುವ ಕರ್ನಾಟಕ ಸರಕಾರದ ಉದ್ದಿಮೆಯಾದ ಎನ್. ಜಿ. ಈ. ಎಫ್ ಸಂಸ್ಥೆಯಲ್ಲಿ ಭಾಷಾಂತರ ಮತ್ತು ಕಲ್ಯಾಣಾಧಿಕಾರಿಯಾಗಿ ೧೯೮೧ರಲ್ಲಿ ಸೇರಿ ಇಪತ್ತು ವರ್ಷಗಳ ಸೇವೆಯ ಬಳಿಕ ಸ್ವಯಂ ನಿವೃತ್ತಿಯನ್ನು ಪಡೆದರು. == ವೈಯಕ್ತಿಕ ಜೀವನ == ಬೆಂಗಳೂರಿನಲ್ಲಿ ನೆಲೆಸಿರುವ ಸಂಧ್ಯಾರೆಡ್ಡಿಯವರು ಶ್ರೀ ಶಂಕರ ರೆಡ್ಡಿಯವರನ್ನು ವಿವಾಹವಾಗಿದ್ದು, ಈ ದಂಪತಿಗಳಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. == ಸಾಹಿತ್ಯ ಮತ್ತು ಸಂಗೀತ == ತಾಯಿ ಅನಸೂಯಾ ರಾಮರೆಡ್ಡಿಯವರಿಗೆ ಕನ್ನಡ ಸಾಹಿತ್ಯದಲ್ಲಿ ಅಪಾರ ಒಲವಿದ್ದು, ಮನೆಯಲ್ಲಿ ಗಣನೀಯವಾದ ಪುಸ್ತಕ ಭಂಡಾರವಿದ್ದು, ಸಂಧ್ಯಾರೆಡ್ಡಿಯವರು ಸ್ವಾಭಾವಿಕವಾಗಿ ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಳ್ಳಲಾರಂಭಿಸಿದರು. ಜತೆಗೆ ಐದಾರು ವರ್ಷ ಪ್ರಾಯದ ಎಳೆವೆಯಲ್ಲೇ ಇವರ ಕಂಠ ಮಾಧುರ್ಯವನ್ನು ಗಮನಿಸಿದ ಇವರ ಅಜ್ಜಿ ದುರ್ಗದ ಗುಡ್ಡದ ಸಮೀಪದಲ್ಲಿದ್ದ ಏಕನಾಥೇಶ್ವರೀ ಕಲಾಮಂದಿರಕ್ಕೆ ಸಂಗೀತಾಭ್ಯಾಸಕ್ಕೆ ಇವರನ್ನು ಸೇರಿಸಿದರು. ಸಂಗೀತ ಇವರಿಗೆ ದೈವದತ್ತವಾಗಿದೆಯೆನ್ನುವಂತೆ, ಸೀನಿಯರ್ ವಿದ್ಯಾರ್ಥಿಗಳಿಗೆ ಕಲಿಸುವ ವರ್ಣ, ಕೀರ್ತನೆಗಳನ್ನು ತಮ್ಮ ಜ್ಯೂನಿಯರ್ ಪರೀಕ್ಷೆಗೆ ಮುಂಚೆಯೇ ಕಲಿತಿದ್ದರು. ಹೀಗೆ ಗಳಿಸಿದ ಸಂಗೀತ ಮತ್ತು ಸಾಹಿತ್ಯ ಜ್ಞಾನಗಳು ಇವರ ಕಾವ್ಯಸೃಷ್ಠಿಗೆ ತಳಹದಿಯನ್ನು ಹಾಕಿದವು. ಇವರ ಮೊದಲ ಕವನ ‘ನೆನಪುಗಳು’ ಪ್ರಜಾವಾಣಿಯ ಸಾಪ್ತಾಹಿಕದಲ್ಲಿ ಪ್ರಕಟಗೊಂಡಿತು. ಬಳಿಕ ಕನ್ನಡದ ಹಲವಾರು ಪತ್ರಿಕೆಗಳಲ್ಲಿ ಅನೇಕ ಕವನಗಳು ಬೆಳಕು ಕಂಡವು. == ಕರ್ನಾಟಕ ಲೇಖಕಿಯರ ಸಂಘ == ಸಂಧ್ಯಾರೆಡ್ಡಿಯವರು ಕರ್ನಾಟಕ ಲೇಖಕಿಯರ ಸಂಘದ ಗೌರವ ಕಾರ್ಯದರ್ಶಿಯಾಗಿಯೂ, ಉಪಾಧ್ಯಾಕ್ಷೆಯಾಗಿಯೂ, ಅಧ್ಯಕ್ಷೆಯಾಗಿಯೂ ಕಾರ್ಯನಿರ್ವಹಿಸಿದ್ದು ಅನೇಕ ಕೃತಿಗಳನ್ನು ಸಂಪಾದಿಸಿರುವರು. ಮಹಿಳೆಯರ ಸಾಹಿತ್ಯ ಕೃತಿಗಳನ್ನು ಪ್ರಕಾಶಪಡಿಸುವದಲ್ಲದೆ, ಲೇಖಕಿಯರ ಆತ್ಮಕತೆಗಳನ್ನೂ ಪ್ರಕಟಿಸಬೇಕೆಂಬ ಉದ್ದೇಶದಿಂದ ಮಹಿಳೆ - ಪರಿಸರ - ಸಾಹಿತ್ಯ ಎಂಬ ಯೋಜನೆಯನ್ನು ಹಮ್ಮಿಕೊಂಡರು. ಹೀಗೆ ಹಲವಾರು ಲೇಖಕಿಯರನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಪರಿಚಯಿಸಿದರು. ಅವರ ಆತ್ಮಕಥನ ರೂಪಕಗಳು, ಲೇಖಕಿಯರ ಮಾಹಿತಿಕೋಶ, ಅಲ್ಲದೆ ಹಲವಾರು ಕವಯಿತ್ರಿಯರ ಕವನ ಸಂಕಲನಗಳು, ಬೆಳ್ಳಿಹಬ್ಬದ ಸಂಚಿಕೆ, ಮೊದಲಾದವುಗಳನ್ನು ಸಂಪಾದಿಸಿದ್ದಾರೆ. == ಅಧ್ಯಾಪನ ವೃತ್ತಿ == ಅಧ್ಯಾಪಕಿಯಾಗಿ ವಿ.ವಿ.ಪುರ ಕಾಲೇಜು ಮತ್ತು ಬಿ.ಎಂ.ಎಸ್‌. ಎಂಜಿನಿಯರಿಂಗ್‌ ಕಾಲೆಜುಗಳಲ್ಲಿ ದುಡಿದಿರುವರಲ್ಲದೆ, ಬೆಂಗಳೂರು, ಮೈಸೂರು ಹಾಗೂ ಮಂಗಳೂರು ವಿಶ್ವವಿದ್ಯಾನಿಲಯಗಳಲ್ಲಿ, ಜಾನಪದ ಕನ್ನಡ ಸಾಹಿತ್ಯ ಪರಿಷತ್ತು, ಮೈಸೂರು ವಿಶ್ವವಿದ್ಯಾನಿಲಯದ ಅಂಚೆ ತೆರಪಿನ ಶಿಕ್ಷಣದ ಕನ್ನಡ ಎಂ.ಎ. ತರಗತಿಗಳು, ಮೊದಲಾದೆಡೆ ಬೋಧಕರಾಗಿಯೂ ಸೇವೆ ಸಲ್ಲಿಸಿದ್ದಾರೆ. == ಜನಪದ ಸಾಹಿತ್ಯ == === ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣೆ === (://..../. 2011-10-24 ವೇಬ್ಯಾಕ್ ಮೆಷಿನ್ ನಲ್ಲಿ.) ೧. ಮೂವತ್ತು ಜನಪದ ಕಥೆಗಳು ೨. ಕನ್ನಡ ಜನಪದ ಕಥೆಗಳು ೩. ಜನಪದ ಸಾಹಿತ್ಯದಲ್ಲಿ ಮಹಿಳೆ ೪. ಜಾನಪದ ಸ್ವರೂಪ ಮತ್ತು ಸಾಹಿತ್ಯ (ಡಿ. ಲಿಂಗಯ್ಯನವರೊಡನೆ)- ೨೦೦೬ ೫. ಕೈಗಾರಿಕಾ ಜಾನಪದ ಸಾಹಿತ್ಯ ೬. ಹಳ್ಳಿಯ ಹಾಡುಗಳು ೭. ರಿಚರ್ಡ್ ಎಮ್ ಡಾರ್ಸನ್ ೮. ಜನಪದ ವರ್ಷ ೯. ಜಾನಪದ ಪರಿಶೀಲನೆ === ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ಮೂಲಕ ಪ್ರಕಟಣೆ === ೧. ಗ್ರಾಮೀಣ ಉಡುಗೆ ತೊಡುಗೆಗಳು (ಸಂಪಾದನೆ: ಡಾ ದೇವೇಂದ್ರಕುಮಾರ ಹಕಾರಿಯವರೊಡನೆ) - ೨೦೦೦ ೨. ಗ್ರಾಮೀಣ ಬೇಟೆಗಳು (ಸಂಪಾದನೆ: ಡಾ ದೇವೇಂದ್ರಕುಮಾರ ಹಕಾರಿಯವರೊಡನೆ) - ೨೦೦೦ === ಕವನ ಸಂಕಲನ === ೧. ಮೂವತ್ತೈದರ ಹೊಸ್ತಿಲು - ಪರಿಮಳ ಪ್ರಕಾಶನ, ಬೆಂಗಳೂರು - ೧೯೯೦ ೨. ಈ ಪ್ರೀತಿಯೊಳಗೆ - ೩. ಇದು ಇನ್ನೊಂದು ಲೋಕ - === ಕಥಾ ಸಂಕಲನ === ೧. ಬೇರೊಂದು ದಾರಿ - ನೆಲಮನೆ ಪ್ರಕಾಶನ - ೧೯೯೮ === ಅನುವಾದಿತ ಕೃತಿಗಳು === ೧. ಕಲೆವಲ - ಫಿನ್ ಲ್ಯಾಂಡ್ ದೇಶದ ಜನಪದ ಮಹಾಕಾವ್ಯ - ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಿತ - ೨೦೦೧, ೨೦೦೯ ೨. ಬರ್ಕ್ ವೈಟ್ ಕಂಡ ಗಾಂಧಿ - ಪ್ರಸಾರಾಂಗ, ಬೆಂಗಳೂರು ಪ್ರಕಟಿತ.- ೨೦೦೫ ೩. ಬರ್ಕ್ ವೈಟ್ ಕಂಡ ಭಾರತ - ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಿತ. - ೨೦೦೭ ೪. ದೇವರು ಧರ್ಮದ ಚಿಂತೆ - ಕರ್ನಾಟಕ ಲೇಖಕಿಯರ ಸಂಘ - ೨೦೦೮ ೫. ಇನ್ನೊಂದು ದನಿ - ಕವನ ಸಂಕಲನ === ಜೀವನ ಚರಿತ್ರೆ === ೧. ಕ್ಯಾಸಂಬಳ್ಳಿ ಚಂಗಲರಾಯರೆಡ್ಡಿ ೨. ‘ಪ್ರಿಯಬಂಧು’ - ಮುಲ್ಕಾ ಗೋವಿಂದ ರೆಡ್ಡಿಯವರ ಜೀವನಚರಿತ್ರೆ, ೩. ಅನಸೂಯರಾಮರೆಡ್ಡಿಯವರು === ಸಂಪಾದಿತ ಕೃತಿಗಳು === ೧. ಲೇಖ-ಲೋಕ - ಆತ್ಮಕಥನ ರೂಪಕಗಳು, ೨. ಎಪ್ಪತ್ತರ ವಯಸ್ಸು ಇಪ್ಪತ್ತರ ಮನಸು, ೩. ನಮ್ಮ ಬದುಕಿನ ಪುಟಗಳು, ೪. ಲೇಖಕಿಯರ ಮಾಹಿತಿಕೋಶ, ೫. ನಮ್ಮ ಬದುಕು ನಮ್ಮ ಬರಹ ೬. ಲೇಖಕಿಯರ ಸಣ್ಣ ಕಥೆಗಳು, ೭. ನಿರುಪಮ ಲೋಕ (ಡಾ. ನಿರುಪಮಾರವರ ಅಭಿನಂದನ ಗ್ರಂಥ), ೮. ಮಹಿಳಾ ಕಾವ್ಯ === ಇತರ ಕೃತಿಗಳು === ಅಮೆರಿಕಾ, ರಷ್ಯಾದ ಕವಿತೆಗಳು ಮತ್ತು ಸಣ್ಣಕತೆಗಳು, ಲಂಕೇಶ್‌ ಪತ್ರಿಕಾ ಬಳಗದ ಆಲ್‌ರೌಂಡರ್ ಕ್ರೀಡಾ ಪತ್ರಿಕೆಯಲ್ಲಿ ಬರೆಹಗಳು, ಕೇಂದ್ರಸಾಹಿತ್ಯ ಅಕಾಡಮಿಗಾಗಿ ಸಣ್ಣಕತೆಗಳು, ಭಾರತ ಮಹಿಳೆ ಮತ್ತು ಸಂವಿಧಾನಾತ್ಮಕ ಹಕ್ಕುಗಳು, ಎಂ.ಎ. ತರಗತಿಗಳ ಚರಿತ್ರೆ ಮತ್ತು ಸಮಾಜಶಾಸ್ತ್ರದ ಪಠ್ಯಗಳು, ರಷ್ಯಾದ ಕಲಾವಿದ ಇಲ್ಯಾಪಿರೆನ್‌ ಬದುಕು-ಬರೆಹ, ಎನ್‌.ಜಿ.ಇ.ಎಫ್‌ ಸಂಸ್ಥೆಯಲ್ಲಿ ಭಾಷಾಂತರ ಅಧಿಕಾರಿಯಾಗಿ ಆಡಳಿತ, ತಾಂತ್ರಿಕ, ವಾಣಿಜ್ಯ, ಹಣಕಾಸು ವಿಷಯಗಳ ಕನ್ನಡ ಅನುಷ್ಠಾನ ಹಾಗೂ, ಭಾಷಾಂತರಗಳು. == ಪ್ರಶಸ್ತಿಗಳು == ೧. ಜೀ ಶಂ ಪರಮಶಿವಯ್ಯ ಪ್ರಶಸ್ತಿ - ಜನಪದ ಕಲೆ-ಸಾಹಿತ್ಯಗಳಲ್ಲಿ ಸಲ್ಲಿಸಿರುವ ಅನುಪಮ ಸೇವೆಗೆ ಕರ್ನಾಟಕ ಜಾನಪದ ಅಕಾಡಮಿಯಿಂದ ೨. ಹ.ಕ. ರಾಜೇಗೌಡ `ಜಾನಪದ ತಜ್ಞ’ ಪ್ರಶಸ್ತಿ - ಕರ್ನಾಟಕ ಸಂಘದ ವತಿಯಿಂದ. ೩. ಕನ್ನಡ ಸಾಹಿತ್ಯ ಪರಿಷತ್ತಿನ ಮಲ್ಲಿಕಾ ದತ್ತಿನಿಧಿ ಪ್ರಶಸ್ತಿ. ೪. ಶಾರದಾ ರಾಮಲಿಂಗಪ್ಪ ದತ್ತಿ ನಿಧಿ ಪ್ರಶಸ್ತಿ, ೫. ಗೊರೂರು ಸಾಹಿತ್ಯ ಪ್ರಶಸ್ತಿ, ೬. ಜಾನಪದ ಲೋಕ ಪ್ರಶಸ್ತಿ, ೭. ಬಿ.ಎಸ್‌. ಚಂದ್ರಕಲಾರವರ ಲಿಪಿಪ್ರಾಜ್ಞೆ ಪ್ರಶಸ್ತಿ. ೮. ಸಾವಿತ್ರಮ್ಮ ದೇಜಗೌ ಮಹಿಳಾ ಪ್ರಶಸ್ತಿ ೨೦೧೨ ೯. ಡಾ ಅನುಪಮಾ ನಿರಂಜನ ಪ್ರಶಸ್ತಿ ೨೦೧೩ ೧೦. ಸೀತಾಸುತ ಸಾಹಿತ್ಯ ಸೇವಾ ಪ್ರಶಸ್ತಿ ೨೦೧೩ == ಇತರ ಕಾರ್ಯಗೌರವಗಳು == ಸಾಹಿತ್ಯಕ್ಕೆ ಸಂಬಂಧಿಸಿದಂತೆ ಆಕಾಶವಾಣಿ ಮತ್ತು ದೂರದರ್ಶನದಲ್ಲಿ ಹಾಗೂ ಅನೇಕ ಕನ್ನಡ ಸಂಘ ಸಂಸ್ಥೆಗಳಲ್ಲಿ ಭಾಷಣಗಳನ್ನಿತ್ತಿದ್ದಾರೆ. ಇಂದೋರ್, ದೆಹಲಿ, ಮುಂಬಯಿಗಳಲ್ಲಿ ನಡೆದ ಕವನ ವಾಚನ ಕಾರ್ಯಕ್ರಮಗಳು; ವಿಶ್ವವಿದ್ಯಾಲಯ, ಆಕಾಡೆಮಿಗಳ ವಿಚಾರ ಸಂಕಿರಣ ಮುಂತಾದವುಗಳಲ್ಲಿ ಭಾಗವಹಿಸಿದ್ದಾರೆ. ಚೆನ್ನೈಯಿಂದ ಪ್ರಕಟವಾಗಿರುವ ಕನ್ನಡ ಜಾನಪದ ವಿಶ್ವಕೋಶಕ್ಕಾಗಿ ಲೇಖನಗಳನ್ನಿತ್ತಿದ್ದಾರೆ. ಕರ್ನಾಟಕ ಜಾನಪದ ಅಕಾಡೆಮಿ ಪ್ರಕಟಿಸಿರುವ ‘ಜಾನಪದ ನಿಘಂಟು’ವಿನ ಪ್ರಾದೇಶಿಕ ಹಾಗೂ ಸ್ಥಾನಿಕ ಸಂಪಾದಕರಾಗಿಯೂ, ಕನ್ನಡ ಸಾಹಿತ್ಯ ಪರಿಷತ್ತು ಚಂದ್ರಶೇಖರ ಕಂಬಾರರ ನೇತೃತ್ವದಲ್ಲಿ ಸಂಪಾದಿಸಿರುವ ‘ಜಾನಪದ ವಿಶ್ವಕೋಶದ’ ಗೌರವ ಸಂಪಾದಕರಾಗಿಯೂ ದುಡಿದಿದ್ದಾರೆ. == ಬಾಹ್ಯ ಸಂಪರ್ಕಗಳು == ://..//Karnataka_literature ://./.# 2016-03-05 ವೇಬ್ಯಾಕ್ ಮೆಷಿನ್ ನಲ್ಲಿ.